ಶಿವಮೊಗ್ಗ: ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಯುವಜನರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹೇಳಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯುಕ್ತ ಆಶಯದಲ್ಲಿ ರಾಜ್ಯ ಘಟಕ ಆಯೋಜಿಸಿದ್ದ ಕೇಂದ್ರ ಸರ್ಕಾರದ ಯೋಜನೆಯಾದ ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮನುಷ್ಯರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯು ತುಂಬಾ ಮುಖ್ಯ. ಜನರಿಗೆ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಇದ್ದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರ ರಾಷ್ಟ್ರೀಯ ಕಾರ್ಯಕ್ರಮ ಆಗಿದ್ದು, ಪ್ರತಿಯೊಬ್ಬರೂ ಸಂಕಷ್ಟ ಕಾಲದಲ್ಲಿ ತಮ್ಮ ಅಮೂಲ್ಯವಾದ ಜೀವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಅಗತ್ಯವಾದ ಅಮೂಲ್ಯವಾದ ಜಾಗೃತಿ ಕಾರ್ಯಕ್ರಮ ಇದಾಗಿದೆ. ಇಂತಹ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಾಗ ತಾವು ತರಬೇತಿ ಪಡೆದುಕೊಂಡು ವಿಪತ್ತಿನಲ್ಲಿ ಇರುವ ಪ್ರತಿಯೊಬ್ಬರನ್ನು ಸಂರಕ್ಷಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ವಿಪತ್ತುಗಳು ಯಾರಿಗೆ ಯಾವ ಸಂದರ್ಭದಲ್ಲಿ ಸಂಭವಿಸುತ್ತವೆ ಎಂಬುದರ ಅರಿವು ಇರುವುದಿಲ್ಲ. ನಾವುಗಳು ಸದಾ ಪರಿಣಿತರಾಗಿ ಧೈರ್ಯದಿಂದ ಇಂತಹ ಸಮಸ್ಯೆಗಳನ್ನು ಎದುರಿಸುವಲ್ಲಿ ಕಾಲೇಜು ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುವುದು ತುಂಬಾ ಅಗತ್ಯವಾಗಿದೆ. ಒಂದು ವಾರ ವಿವಿಧ ಬಗೆಯ ತರಬೇತಿಗಳು ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖಾಂತರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೋವರ್ಸ್ ರೆಂಜರ್ಸ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ವಿಪತ್ತುಗಳು ಎದುರಾದಾಗ ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಕಲಿಯಬೇಕು ಎಂದು ಹೇಳಿದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮನುಕುಲದ ಸೇವೆಗಳ ಜೊತೆಗೆ ಇಂತಹ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲೂ ಸಹ ಕೈಜೋಡಿಸುತ್ತಿದೆ ಎಂದು ತಿಳಿಸಿದರು.
ಎನ್ ಡಿ ಆರ್ ಎಫ್ ತಂಡದಿಂದ ವಿವೇಕ್, ದೇವರಾಜ್, ಸುಧೀರ್, ಕೃಷ್ಣ, ಸೋನುಪ ಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್ ನ ಆಯುಕ್ತ ಆನಂದ್ ಎಸ್ ಎನ್, ರವಿ ಕೆ, ಲಕ್ಷ್ಮೀ ಕೆ ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್, ರಾಜೇಶ್ ಅವಲಕ್ಕಿ, ಚುಡಾಮಣಿ ಪವಾರ್, ಚಂದ್ರಶೇಖರಯ್ಯ ಕೆ ವಿ, ಮಲ್ಲಿಕಾರ್ಜುನ ಕಾನೂರ್, ರಾಜ್ಯ ಸಂಘಟನಾ ಆಯುಕ್ತರಾದ ಸುಮನಾ ಶೇಖರ್, ರಾಘವೇಂದ್ರ, ರುದ್ರಪ್ಪ ಚೀಲೂರ್ ಮತ್ತಿತರರು ಇದ್ದರು.
0 Comments